ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

 ಚುನಾವಣೆ ವ್ಯಾಪಾರ ಅಲ್ಲ- ನನ್ನ ಮತ ಮಾರಾಟಕ್ಕಿಲ್ಲ

 ನಮ್ಮ ತೋರು ಬೆರಳಿನಲ್ಲಿದೆ ಸ್ವಾಭಿಮಾನದ ಹೋರಾಟ:-

 ಮತಗಳನ್ನು ಮಾರಾಟ ಮಾಡಿಕೊಳ್ಳುವುದು ಸಂವಿಧಾನಕ್ಕೆ ಮಾಡುವ ದೊಡ್ಡಅಪಚಾರ. ಮತದಾರನಿಗೆ ಚುನಾವಣೆ ಎನ್ನುವುದು ದೇವರ ಪೂಜೆ ಇದ್ದಂತೆ ಇಲ್ಲಿ ವಿಘ್ನವಾದರೆ ಮುಂದಿನ ಐದು ವರ್ಷಗಳ ಕಾಲ ನರಕ ಅನುಭವಿಸಬೇಕಾಗುತ್ತದೆ.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ತೀರ ಗಂಭೀರ ಹಂತವೊಂದನ್ನು ತಲುಪಿದೆ.ಬಡವರ ಹಾಗೂ ಸಮಾಜದಿಂದ ನಿರ್ಲಕ್ಷ ಕ್ಕೋಳಗಾದವರ ಹಕ್ಕುಗಳು ಹಾಗೂ ಅರ್ಹತೆಗಳು ಸಾರಸಗಟಾಗಿ ಅಸಡ್ಡೆಗೊಳ್ಳುತ್ತಿವೆ. ಅಲ್ಲದೆ ಅದನ್ನು ವ್ಯವಸ್ಥಿತವಾಗಿ ಉಲ್ಲಂಘಿಸಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ಜನಪ್ರತಿನಿಧಿಗಳoತಲ್ಲ ಅವರೇ ಜನನಾಯಕರಂತೆ ವರ್ತಿಸುತ್ತಿದ್ದಾರೆ.

 ಸರಕಾರ ತಪ್ಪಿದ್ದರೆ ಪ್ರಶ್ನಿಸುವ ಹಕ್ಕನ್ನು ಸಂವಿಧಾನ ನಮಗೆ ನೀಡಿದೆ.ಆದರೆ ನಮ್ಮ ಮತವನ್ನು ಮಾರಿಕೊಂಡಿದ್ದರೆ ನಮಗೆ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಇರುವುದಿಲ್ಲ. ಹಳ್ಳಿಗಳಲ್ಲಿ ಹಾಗೂ ಹಿಂದುಳಿದ ನಗರ ಪ್ರದೇಶಗಳಲ್ಲಿ ಇದು ಕಣ್ಣು ಕೊರೈಸುವ ಸತ್ಯವಾಗಿದೆ.ಇಂತಹ ವಿಲಕ್ಷಣ ಸನ್ನಿವೇಶದಲ್ಲಿ ಮಹತ್ವದ ಆಶಾಕಿರಣವಾಗಿ ಕಾಣಿಸುವುದೇ ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಆಂದೋಲನ. (“My vote not for sale “).

 ಪಾರದರ್ಶಕ ನ್ಯಾಯಯುತ ಹಾಗೂ ಭ್ರಷ್ಟಾಚಾರದ ಸೋಂಕೆ ಇಲ್ಲದ ಚುನಾವಣಾ ಪ್ರಕ್ರಿಯೆಗೆ ಅವಕಾಶವಿರಬೇಕೆಂಬುದೇ ಈ ಆಂದೋಲನದ ಮೂಲ ಆಗ್ರಹ.

ಇದರ ಮೂಲಬೇಡಿಕೆ : ಸಂವಿಧಾನದಲ್ಲಿ ಉಲ್ಲೇಖಿಸಲಾಗಿರುವ ಎಲ್ಲಾ ಮೌಲ್ಯಗಳನ್ನು ಪ್ರಾಮಾಣಿಕವಾಗಿ ಎತ್ತಿ ಹಿಡಿಯುವ ಪ್ರಜ್ಞಾವಂತ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತೆ ಮರಳಿ ಬರಬೇಕೆನ್ನುವುದೇ ಈ ಆಂದೋಲನದ ಮೂಲ ಉದ್ದೇಶ. ಅಲ್ಲದೆ ಅತ್ಯಂತ ನಿರ್ಲಕ್ಷಕ್ಕೊಳಗಾಗಿರುವ ಮತದಾರರ ಪೌರತ್ವದ ಮರುಸ್ಥಾಪನೆಯಾಗಬೇಕೆಂಬುದೇ ಈ ಅಭಿಯಾನದ ಮೂಲ ಉದ್ದೇಶವಾಗಿದೆ.

 ನಮ್ಮ ಮತಗಳನ್ನು ಯಾರಿಗೂ ಮಾರಿಕೊಳ್ಳಲಾರೆವು ಎಂಬ ಘೋಷಣೆ ಆಂದೋಲನ ಮೊದಲು ಶುರುವಾಗಿದ್ದೆ 2018ರಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಂದು ಈ ಚುನಾವಣೆಯಲ್ಲಿ 21 ಜಿಲ್ಲೆಗಳ 22,000 ಗ್ರಾಮೀಣ ನಿವಾಸಿಗಳು ಅತಿ ಉತ್ಸಾಹದಿಂದ ಪಾಲ್ಗೊಂಡಿದ್ದರು. 2013ರ ಚುನಾವಣೆಯ ಹೊತ್ತಿಗೆ ಈ ಆಂದೋಲನ ಚೊಕ್ಕ ಚುನಾವಣಾ ಅಭಿಯಾನ ಎಂಬ ವೇದಿಕೆಯಡಿ ತೀವ್ರತೆರನಾದ ಹೋರಾಟದ ತಿರುವು ಪಡೆದುಕೊಂಡಿದೆ. ರಾಜ್ಯದ 21 ಪೌರ ಸಂಘಟನೆಗಳು ಹಾಗೂ ಜನಾಂಧೋಲನ ಘಟಕಗಳು ಈ ಚೊಕ್ಕ ಚುನಾವಣಾ ಅಭಿಯಾನದಲ್ಲಿ ಪಾಲ್ಗೊಂಡಿವೆ.

 ಇಂದು ಈ ಜನ ಜಾಗೃತಿ ಆಂದೋಲನದಲ್ಲಿ ಯುವ ಜನರಿದ್ದಾರೆ ಮಹಿಳೆಯರಿದ್ದಾರೆ ಪ್ರತಿ ಜಿಲ್ಲೆಯಲ್ಲೂ ಕೂಡ ಈ ಅಭಿಯಾನದಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದಾರೆ.ಸ್ವಚ್ಛ ಆಡಳಿತದ ಅಗತ್ಯ,ಓಟಿನ ಪವಿತ್ರತೆ ಕಾಪಾಡುವ ಅಗತ್ಯ ಕುರಿತ ಚರ್ಚೆ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಈ ಆಂದೋಲನದ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಹೀಗೆ ಹೆಚ್ಚಿನದಾಗಿ ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಈ ಅಭಿಯಾನ ತುಂಬಾ ಜಾಗೃತಗೊಳ್ಳುತ್ತಿದೆ, ಪ್ರತಿಯೊಬ್ಬರಲ್ಲೂ ಕೂಡ ಪ್ರತಿಯೊಬ್ಬರೂ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.

 ನನ್ನ ಮತ ಮಾರಾಟಕ್ಕಿಲ್ಲ ಎಂಬ ಅಭಿಯಾನದಲ್ಲಿ ನಾವು ಒಬ್ಬ ವಿಶೇಷ ವ್ಯಕ್ತಿಯನ್ನು ಕೂಡ ಗುರುತಿಸಿದ್ದೆವು. ನಾಗರಾಜ್ ಕಲಕುಟಗರ್ ಎಂಬುವವರು ಪ್ರಜಾಪ್ರಭುತ್ವದ ಉಳಿವಿಗಾಗಿ  ಈ ಅಭಿಯಾನವನ್ನು ಕೈಗೆತ್ತಿಕೊಂಡು ನನ್ನ ಮತ ಮಾರಾಟಕ್ಕಿಲ್ಲ ಎಂಬ ಭಿತ್ತಿ ಪತ್ರವನ್ನು ಕತ್ತಿಗೆ ತೂಗುಹಾಕಿಕೊಂಡು ಬಾಗಲಕೋಟೆ ಬಸವೇಶ್ವರ ಸರ್ಕಲ್ ನಿಂದ ಬೆಂಗಳೂರಿನ ಫ್ರೀಡಂ ಪಾರ್ಕಿನವರೆಗೂ ಪಾದಯಾತ್ರೆ ಮಾಡಿ ಈ ಅಭಿಯಾನಕ್ಕೆ ಹೊಸ ಹುರುಪು ಮೂಡಿಸಿದ್ದಾರೆ.

 ವಿಶ್ವೇಶ್ವರ ಹೆಗಡೆ ಕಾಗೇರಿ ಯಂತಹ ಹಿರಿಯ ಮುತ್ಸದ್ದಿಗಳು ಕೂಡ ಈ ಅಭಿಯಾನಕ್ಕೆ ಚಾಲನೆ ನೀಡಿ… ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

 ಹೀಗೆ ಮತದಾರ “ಪ್ರಭು” ವಾಗುವ ಪರ್ವಕಾಲವಿದು.ದಯವಿಟ್ಟು ಪ್ರತಿಯೊಬ್ಬರೂ ಈ ಆಂದೋಲನಕ್ಕೆ ಕೈಜೋಡಿಸಿ. ನಾನು ಮತ್ತು ನನ್ನ ಮತ ಮಾರಾಟಕ್ಕಿಲ್ಲ. ಗೌರವಾನ್ವಿತ ಮತದಾರರ ಸ್ವಾಭಿಮಾನದ ಹೋರಾಟ ಇದು ಎಂದು ಪ್ರತಿಪಾದಿಸಿ.


 ಯಶಸ್ವಿನಿಗೌಡ ಆರ್

error: Content is protected !!